`ಬಾನದಾರಿಯಲ್ಲಿ ಸೂರ್ಯ ಜಾರಿಹೋದ ಚಂದ್ರಮೇಲೆ ಬಂದ` ಇದು ಪುನೀತ್ ರಾಜ್ ಕುಮಾರ್ ಅಭಿನಯದ ಭಾಗ್ಯವಂತ ಚಿತ್ರದ ಗೀತೆ. ಇದೇ ಶೀರ್ಷಿಕೆಯಡಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೊಂದು ದುರಂತ ಪ್ರೇಮಕಾವ್ಯದ ನಾಯಕನಾಗಿದ್ದಾರೆ. ಪ್ರೇಕ್ಷಕರನ್ನು ನಗಿಸಿದ್ದಾರೆ, ಅಳಿಸಿದ್ದಾರೆ. ಈವಾರ ತೆರೆಕಂಡಿರುವ ಬಾನದಾರಿಯಲ್ಲಿ ಒಬ್ಬ ತಂದೆ-ಮಗಳ ಕಥೆಯೂ ಹೌದು, ಪ್ರೇಮಿಯ ಕಥೆಯೂ ಹೌದು, ನಾಯಕ ಸಿದ್(ಗಣೇಶ್) ಕ್ರಿಕೆಟ್ ಪ್ಲೇಯರ್, ನಾಯಕಿ ಲೀಲಾ(ರುಕ್ಮಿಣಿ ವಸಂತ್) ಸ್ವಿಮ್ ಕೋಚರ್, ಅದಕ್ಕಿಂತ ಮುಖ್ಯವಾಗಿ ಒಬ್ಬ ಪರಿಸರಪ್ರೇಮಿ, ಚಿಕ್ಕಂದಿನಿಂದ ಕಾಡು, ಅಲ್ಲಿನ ಪ್ರಾಣಿಗಳ ಬಗ್ಗೆ ತುಂಬಾ ಕಾಳಜಿ ಇಟ್ಟುಕೊಂಡು ಬಂದವಳು, ತಾಯಿ ಇಲ್ಲದ ಲೀಲಾಗೆ ತಂದೆಯೇ ಪ್ರಪಂಚ. ಆ ತಂದೆಗೂ ಮಗಳೇ ಸರ್ವಸ್ವ. ಇವರಿಬ್ಬರ ಪ್ರೀತಿಯನ್ನು ಸೃಷ್ಟಿಸಿದ ಆ ದೇವರೇ ಸಹಿಸದಾದನೇನೋ ಎನ್ನುವಂಥ ದುರ್ಘಟನೆ ನಡೆದು ಇಬ್ಬರನ್ನೂ ಬೇರೆ ಮಾಡುತ್ತದೆ.
ಮರಗಳನ್ನು ಉಳಿಸಿ ಎಂದು ಪ್ರತಿಭಟನೆ ಮಾಡುವಾಗ, ಸುರಿದ ಮಳೆಯಲ್ಲಿ ಸಿದ್ ಕಣ್ಣಿಗೆ ಬೀಳುವ ಲೀಲಾ, ಪ್ರಥಮ ಭೇಟಿಯಲ್ಲೇ ಆತನ ಹೃದಯ ಕದಿಯುತ್ತಾಳೆ, ಲೀಲಾಳ ನಡೆ, ನುಡಿ, ಗುಣ ಇಷ್ಟಪಡುವ ಸಿದ್ ಬಿಟ್ಟೂ ಬಿಡದೆ ಆಕೆಯನ್ನು ಫಾಲೋ ಮಾಡಿ ಸ್ನೇಹ ಬೆಳೆಸುತ್ತಾನೆ, ಬರುಬರುತ್ತ ಲೀಲಾ ಕೂಡ ಸಿದ್ ಪ್ರೀತಿಗೆ ಮನಸೋಲುತ್ತಾಳೆ, ಇವರಿಬ್ಬರ ಪ್ರೀತಿ, ಲೀಲಾ ತಂದೆಗೆ ಮಗಳೆಲ್ಲಿ ತನ್ನ ಕೈಬಿಟ್ಟು ಹೋಗ್ತಾಳೋ ಎನ್ನುವ ಭಯ ಹುಟ್ಟಲು ಕಾರಣವಾಗುತ್ತದೆ. ಎಲ್ಲರ ಒತ್ತಾಯಕ್ಕೆ ಮಣಿದು ಮದುವೆಗೆ ಸಮ್ಮತಿ ಸೂಚಿಸುತ್ತಾನೆ. ಮದುವೆಗೆ ಮೂರುದಿನ ಇರುವಾಗ ನಡೆದ ಘಟನೆಯೊಂದು ಇಡೀ ಚಿತ್ರಣವನ್ನೇ ಬದಲಾಯಿಸಿಬಿಡುತ್ತದೆ. ಮುಂದೆ ಕಥೆ ತೆರೆದುಕೊಳ್ಳುವುದು ಆಫ್ರಿಕಾದ ಕಾಡಲ್ಲಿ, ಚಿತ್ರದ ಸೆಕೆಂಡ್ ಹಾಫ್ನಲ್ಲಿ ಪ್ರೇಕ್ಷಕನನ್ನು ಆಫ್ರಿಕಾ ಕಾಡಲ್ಲೇ ಸುತ್ತಾಡಿಸಿದ್ದಾರೆ ನಿರ್ದೇಶಕ ಪ್ರೀತಂಗುಬ್ಬಿ. ಆ ಭಾಗದಲ್ಲಿ ಕಾದಂಬರಿಯಾಗಿ ರೀಷ್ಮಾನಾಣಯ್ಯ ಸರ್ ಪ್ರೈಸ್ ಎಂಟ್ರಿ ಕೊಡುತ್ತಾರೆ. ಬ್ಲಾಗರ್ ಆಗಿ ಲವಲವಿಕೆ ಯಿಂದ ಅಭಿನಯಿಸಿದ್ದಾರೆ.
ಲೀಲಾ ಚಿಕ್ಕಂದಿನಿಂದ ಆಸೆಪಟ್ಟಿದ್ದ, ಆಫ್ರಿಕಾದ ಕಾಡಲ್ಲಿ ಸ್ವತಂತ್ರವಾಗಿ ಓಡಾಡುವ ಪ್ರಾಣಿಗಳ ಮಧ್ಯೆ, ತಂದೆಯ ಜೊತೆ ಸುತ್ತಾಡಬೇಕೆಂಬ ಬಯಕೆಯನ್ನು ಸಿದ್ ಈಡೇರಿಸುತ್ತಾನೆ.
ಒಬ್ಬ ಭಾವುಕ ಪ್ರೇಮಿಯಾಗಿ ಗಣೇಶ್ ಮತ್ತೊಮ್ಮೆ ಇಷ್ಟವಾಗುತ್ತಾರೆ. ತಂದೆಯಾಗಿ ರಂಗಾಯಣ ರಘು ಅಭಿನಯ ಅದ್ಭುತ. ಲೀಲಾ ಪಾತ್ರದ ರುಕ್ಮಿಣಿ ವಸಂತ್ ನೆನಪಾಗಿ ಉಳಿಯುತ್ತಾರೆ. ಚಿತ್ರದ ಸೆಕೆಂಡ್ ಹಾಫ್ ನಲ್ಲಿ ಛಾಯಾಗ್ರಾಹಕನ ಕೆಲಸವೇ ಹೈಲೈಟ್, ಅಷ್ಟು ಚೆನ್ನಾಗಿ ಆಫ್ರಿಕಾ ಕಾಡನ್ನು ಸೆರೆಹಿಡಿದಿದ್ದಾರೆ. ಆಗಾಗ ಕೇಳಿಬರುವ ಕೇಳಿಸುವ ಅಪ್ಪು ಹಾಡು ಅರ್ಥಪೂರ್ಣವಾಗಿದೆ.